ಯಕ್ಷಗಾನ ಜ್ಞಾನ ಸಮೃದ್ದ ಕಲೆ: ಎಡನೀರು ಶ್ರೀ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಒಕ್ಟೋಬರ್ 27 , 2013
|
ಯಕ್ಷಗಾನ ಎಲ್ಲ ರೀತಿಯಲ್ಲಿ ಜ್ಞಾನ ಸಮೃದ್ಧ ಕಲೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಈ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
ಅವರು ರವಿವಾರ ಸುಳ್ಯ ಸ್ನೇಹ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ಪರಿಷತ್ನ ರಾಜ್ಯ ಮಟ್ಟದ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಈ ಕಾರ್ಯಗಾರ ಪರಂಪರೆ ಯಕ್ಷಗಾನದ ಕೊಂಡಿ ಎಂದು ಕರೆಯಲಾಗುವ ಬಲಿಪ ನಾರಾಯಣ ಭಾಗವತರ ನೇತೃತ್ವದಲ್ಲಿ ಹನ್ನೊಂದು ದಿನಗಳ ಕಾಲ ನಡೆಯಿತು.
ಕಲಾವಿದರು ಗೌರವ ಕಾಪಾಡಿಕೊಳ್ಳಬೇಕು
ಸಮಾರೋಪ ಭಾಷಣ ಮಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ. ಶ್ಯಾಮ್ ಭಟ್, ಗುಣಮಟ್ಟದ ಯಕ್ಷಗಾನಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡುತ್ತಾರೆ. ಆದುದರಿಂದ ಗುಣಮಟ್ಟದ ಯಕ್ಷಗಾನ ಮುಂದುವರಿಯಬೇಕು. ಯಕ್ಷಗಾನ ಕಲೆ ಸೀಮೋಲ್ಲಂಘನೆ ಆಗಬೇಕು. ಇಲ್ಲಿ ಅ ಕೆಲಸ ಆಗಿದೆ. ಕಲಾವಿದರು ತಮ್ಮ ವ್ಯಕ್ತಿತ್ವ ಮತ್ತು ಘನತೆ ಉಳಿಸಿಕೊಳ್ಳಬೇಕು. ಕಲಾವಿದರು ಕಲೆಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕಾಗಿರುವುದು ಅವರ ಧರ್ಮ ಎಂದರು.
ಪರಂಪರೆ ಯಕ್ಷಗಾನ ಮುಂದುವರಿಯಲಿ
ಈ ಸಂದರ್ಭ ಬಲಿಪ ನಾರಾಯಣ ಭಾಗವತ ಅವರಿಗೆ ತೆಂಕುತಿಟ್ಟು ವೇದಿಕೆ ಅಜ್ಜ ಬಲಿಪ ಭಾಗವತ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಾರಾಯಣ ಭಾಗವತರು ಮಾತನಾಡಿ, ಇಂದು ಕಲಾವಿದರು ಹಣದ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಅದು ಆಗಬಾರದು. ಪರಂಪರೆ ಯಕ್ಷಗಾನ ಮುಂದುವರಿಯಬೇಕು ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಇಲ್ಲಿ ನಿರಂತರ ಕಾರ್ಯಕ್ರಮವಾಗಿ ಸಾಗಿದೆ. ಈ ಕೆಲಸ ನಿರಂತರ ಆದಾಗ ಮಾತ್ರ ಕಲೆ ಉಳಿಯಲು ಸಾಧ್ಯ ಎಂದರು.
ನಾರಾಯಣ ಭಾಗವತ, ಕಾರ್ಯದರ್ಶಿ ಭಕ್ತವತ್ಸಲ ನೀರಬಿದಿರೆ, ಸಂಘಟನಾ ಸಮಿತಿಯ ಪಿ.ಬಿ. ದಿವಾಕರ ರೈ ಇದ್ದರು. ಡಾ| ಶ್ರೀಕರ ದಾಮ್ಲೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ| ಚಂದ್ರಶೇಖರ ದಾಮ್ಲೆ ಪ್ರಸ್ತಾವಿಕ ಮಾತನಾಡಿ, ಅಗಲಿದ ಶೇಣಿ ಗೋಪಾಲಕೃಷ್ಣ ಭಟ್ ಅವರ ಸಂಸ್ಮರಣೆ ಮಾಡಿದರು. ಪಾತನಡ್ಕ ಶ್ಯಾಮ್ ಭಟ್ ಸಮ್ಮಾನ ಪತ್ರ ವಾಚಿಸಿದರು. ಪ್ರದೀಪ್ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಕೋಶಾಧಿಕಾರಿ ಜಗನ್ಮೋಹನ ರೈ ಮರ್ಕಂಜ ವಂದಿಸಿದರು.
ಕೃಪೆ : http://www.udayavani.com
|
|
|